Round Table India
You Are Reading
ಜನಾರ್ದನ ಪೂಜಾರಿಯವರಿಗೊಂದು ಪತ್ರ
0
Features

ಜನಾರ್ದನ ಪೂಜಾರಿಯವರಿಗೊಂದು ಪತ್ರ

default image

ದಿನೇಶ್ ಅಮೀನ್‌ಮಟ್ಟು

ಪ್ರಿಯ ಜನಾರ್ದನ ಪೂಜಾರಿಯವರೇ,

ಇಪ್ಪತ್ತೈದು ವರ್ಷಗಳ ಹಿಂದೆ ನಿಮಗೊಂದು ಪತ್ರ ಬರೆದಿರುವುದು ನಿಮಗೆ ನೆನಪಿದೆಯೋ ಗೊತ್ತಿಲ್ಲ. ನೆನಪಿಲ್ಲದಿದ್ದರೆ ಅದರ ಪ್ರತಿಯನ್ನು ಕಳುಹಿಸಿಕೊಡುತ್ತೇನೆ. ಅದು ನಾರಾಯಣ ಗುರುಗಳು ಕುದ್ರೋಳಿಯಲ್ಲಿ ಸ್ಥಾಪಿಸಿದ್ದ ಗೋಕರ್ಣನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರದಲ್ಲಿ ನೀವು ತೊಡಗಿಕೊಂಡಿದ್ದ ಕಾಲ. ಜೀರ್ಣೋದ್ದಾರ ಮಾಡಿದ ದೇವಸ್ಥಾನವನ್ನು ಉದ್ಘಾಟಿಸಲು ಶೃಂಗೇರಿ ಮಠದ ಸ್ವಾಮಿಗಳನ್ನು ಆಹ್ಹಾನಿಸಿರುವುದನ್ನು ನಾನು ವಿರೋಧಿಸಿದ್ದೆ. ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿ ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಸ್ಥಾನವನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಈಗಲೂ ಪಾಲಿಸುತ್ತಿರುವ ಸ್ವಾಮೀಜಿಗಳಿಂದ ಹೇಗೆ ಉದ್ಘಾಟನೆಮಾಡಿಸುತ್ತೀರಿ ಎನ್ನುವುದು ನನ್ನ ಸರಳ ಪ್ರಶ್ನೆಯಾಗಿತ್ತು.

janardhan poojary

ನನ್ನ ಯೋಚನೆಯೇ ಬೇರೆಯಾಗಿತ್ತು. ಕುದ್ರೋಳಿ ದೇವಸ್ಥಾನವನ್ನು ನಾರಾಯಣಗುರುಗಳು ಯಾವ ಉದ್ದೇಶದಿಂದ ಸ್ಥಾಪಿಸಿದ್ದರೋ ಆ ಉದ್ದೇಶವನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕೆಂಬುದು ನನ್ನ ಕಿರಿತಲೆಯ ಉದ್ದೇಶವಾಗಿತ್ತು.. ಕುದ್ರೋಳಿ ದೇವಸ್ಥಾನವನ್ನು ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಸಂಘಟನೆಯ ಕೇಂದ್ರವನ್ನಾಗಿ ಬೆಳೆಸಬೇಕೆಂದು ನಾನು ನಿಮಗೆ ಮತ್ತು ನಿಮ್ಮ ಬೆಂಬಲಿಗರಿಗೆ ಹೇಳಿದ್ದೆ. ಯಾಕೆಂದರೆ ಆಗಲೇ ಕರಾವಳಿಯಲ್ಲಿ ಕೋಮುವಾದದ ವಿಷಸರ್ಪ ಹೆಡೆಬಿಚ್ಚತೊಡಗಿತ್ತು. ಮಂದಿರ-ಮಸೀದಿ-ಚರ್ಚುಗಳನ್ನು ಕಟ್ಟುವ ಮೂಲಕ ಇದನ್ನು ಎದುರಿಸಲು ಆಗುವುದಿಲ್ಲ. ಈ ಸಮುದಾಯಗಳು ಧರ್ಮದ ನಶೆಯೇರಿಸಿಕೊಂಡು ದಾರಿ ತಪ್ಪುವ ಮೊದಲೇ ಅವರಲ್ಲಿ ನಾರಾಯಣ ಗುರುಗಳ ಚಿಂತನೆಯ ಮೂಲಕ ಜಾಗೃತಿ ಹುಟ್ಟಿಸಿ ಸಾಮಾಜಿಕವಾಗಿ ಸಂಘಟಿಸಬೇಕೆಂಬುದು ನನ್ನ ಆಶಯವಾಗಿತ್ತು. ಇದು ನಿಮ್ಮ ರಾಜಕೀಯಕ್ಕೂ ಸಹಾಯವಾಗುತ್ತದೆ ಎಂದು ನಾನು ನಿಮಗೆ ಹೇಳಿದ್ದೆ. ಯಥಾಪ್ರಕಾರ ಹಿತ್ತಾಳೆ ಕಿವಿಯವರೆಂಬ ಆರೋಪ ಹೊತ್ತಿರುವ ನೀವು ಇಂತಹ ಒಳ್ಳೆಯ ಸಲಹೆಗಳಿಗೆ ಕಿವಿಕೊಡಲಿಲ್ಲ. ಇದರ ಪರಿಣಾಮ ನಿಮ್ಮ ಕಣ್ಣಮುಂದಿದೆ.

ಕೋಮುವಾದದ ಹೆಸರಲ್ಲಿ ಕರಾವಳಿಯಲ್ಲಿ ನಿತ್ಯ ರಕ್ತದೋಕುಳಿ ನಡೆಯುತ್ತಿದೆ. ಸಾಯುತ್ತಿರುವವರೆಲ್ಲರೂ ನಿಮ್ಮನ್ನೇ ನಾಯಕರೆಂದು ಹೇಳಿಕೊಳ್ಳುತ್ತಿರುವ ಬಡಬಿಲ್ಲವ ತಂದೆ-ತಾಯಿಗಳ ಮಕ್ಕಳು. ನೀವು ಕೇವಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರೆ ಈ ಪತ್ರವನ್ನು ಬರೆಯುತ್ತಿರಲಿಲ್ಲ. ನೀವು ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕರು ಕೂಡಾ ಹೌದು. (ಪ್ರಶ್ನಾತೀತರು ಯಾಕೆಂದರೆ ವಯಸ್ಸು ಎಂಬತ್ತಾಗುತ್ತಿದ್ದರೂ ಮತ್ತೊಬ್ಬ ನಾಯಕನನ್ನು ಬಿಲ್ಲವ ಸಮುದಾಯದಲ್ಲಿ ಬೆಳೆಯಲು ನೀವು ಬಿಟ್ಟಿಲ್ಲ)
ಯಾವುದೇ ಸಮಾಜದ ನಾಯಕನೆಂದು ಕರೆಸಿಕೊಂಡ ಮೇಲೆ ಆ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಕೂಡಾ ಹೊರಬೇಕಾಗುತ್ತದೆ. ಚುನಾವಣೆಯ ಕಾಲದಲ್ಲಿ ಜಾತಿಯ ಹೆಸರು ಹೇಳಿ ಕಣ್ಣೀರುಹಾಕಿ ಓಟು ಕೇಳುವವನಷ್ಟೇ ನಾಯಕನಲ್ಲ. ಜವಾಬ್ದಾರಿಯ ನಿರ್ವಹಣೆಯಲ್ಲಿ ನೀವು ಸಂಪೂರ್ಣವಾಗಿ ಸೋತಿರುವುದು ಮಾತ್ರವಲ್ಲ ನೀವು ದಾರಿತಪ್ಪಿ, ಸಮಾಜವನ್ನೂ ದಾರಿ ತಪ್ಪಿಸುತ್ತಿದ್ದೀರಿ.

ಉಡುಪಿಯ ಕೆಂಜೂರಿನಲ್ಲಿ ನಡೆದ ಪ್ರವೀಣ್ ಪೂಜಾರಿ ಎಂಬ ಅಮಾಯಕ ಯುವಕನೊಬ್ಬನ ಹತ್ಯೆಯ ಹಿನ್ನೆಲೆಯಲ್ಲಿ ಇದನ್ನೆಲ್ಲ ಹೇಳುತ್ತಿದ್ದೇನೆ., ಕೊಲೆ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಹತ್ಯೆಯಾದವರು ಮತ್ತು ಹತ್ಯೆಮಾಡಿದವರ್ಯಾರೆಂದು ಜಗಜ್ಜಾಹೀರಾಗಿದೆ. ಈಗಾಗಲೇ ಸಂಘ ಪರಿವಾರದ ವಿರುದ್ಧ ರಾಜ್ಯದ ಜನತೆಯ ಆಕ್ರೋಶ ಮುಗಿಲುಮುಟ್ಟಿದೆ. ಹೀಗಿದ್ದರೂ ರಾಜ್ಯಸರ್ಕಾರ ನೀಡುವ ಅಕ್ಕಿಯಲ್ಲಿ ಒಂದು ಕಲ್ಲು ಕಂಡರೂ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರ್ಭಟಿಸುವ ನೀವು ಕೊಲೆ ನಡೆದು 48 ಗಂಟೆಗಳಾದರೂ ಬಾಯಿ ಬಿಡದಿರುವುದು ಅಚ್ಚರಿ ಉಂಟುಮಾಡಿದೆ..

ಪ್ರವೀಣ್ ಪೂಜಾರಿ ಸಾವಿಗೆ ಸಂಘ ಪರಿವಾರದ ದುರುಳರು ಮಾತ್ರವಲ್ಲ ಸಜ್ಜನ, ಪ್ರಾಮಾಣಿಕ ಇತ್ಯಾದಿ ಬಿರುದಾಂಕಿತ, ಬಿಲ್ಲವ ಸಮಾಜದ ಏಕಮೇವಾದ್ವೀತಿಯ ನಾಯಕರಾದ ನೀವೂ ಕಾರಣ ಎಂದು ವಿಷಾದದಿಂದ ಹೇಳಬೇಕಾಗುತ್ತದೆ.

ಇಂದು ಕರಾವಳಿಯ ಎರಡುಜಿಲ್ಲೆಗಳು ಕೋಮುವಾದದ ಪ್ರಯೋಗಶಾಲೆ ಎಂಬ ಕುಖ್ಯಾತಿಗೆ ಒಳಗಾಗಿದ್ದರೆ ಇದಕ್ಕೆ ಸಂಘ ಪರಿವಾರದ ನಾಯಕರುಮಾತ್ರವಲ್ಲ ನೀವೂ ಕಾರಣ.

ಈ ಜಿಲ್ಲೆಗಳಲ್ಲಿ ಕೋಮುವಾದದ ವಿಷಕಾಲ ಪ್ರಾರಂಭವಾಗಿದ್ದು ಎಂಬತ್ತರ ದಶಕದ ಅಂತ್ಯ ಮತ್ತು ತೊಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ. ಆ ದಿನಗಳಿಂದಲೂ ದಕ್ಷಿಣ ಕನ್ನಡದ ಮಟ್ಟಿಗೆ ನೀವೇ ಕಾಂಗ್ರೆಸ್ ಪಕ್ಷ ಮತ್ತು ಬಿಲ್ಲವ ಸಮುದಾಯದ ನಾಯಕರಾಗಿದ್ದವರು. 1977ರಿಂದ 1989ರ ವರೆಗಿನ ನಾಲ್ಕು ಲೋಕಸಭಾ ಚುನಾವಣೆಗಳನ್ನು ಸತತವಾಗಿ ಗೆದ್ದು ಬೀಗುತ್ತಿದ್ದವರು. ಆದರೆ ಬದಲಾಗುತ್ತಿರುವ ರಾಜಕೀಯವನ್ನು ಗ್ರಹಿಸಲು ನಿಮಗೆ ಸಾಧ್ಯವಾಗಲಿಲ್ಲ. ನಾರಾಯಣ ಗುರುಗಳ ಚಿಂತನೆಯನ್ನು ಅರ್ಥಮಾಡಿಕೊಳ್ಳಲು ಕೂಡಾ ನಿಮಗೆ ಸಾಧ್ಯವಾಗಲಿಲ್ಲ.

ಚುನಾವಣಾ ಕಾಲದಲ್ಲಿ ಮಸೀದಿಗೆ ಹೋಗಿ ಕೈಮುಗಿಯುವುದು, ಎಲ್ಲ ಹಿಂದೂ ದೇವತೆಗಳ ಮೂರ್ತಿ ಸ್ಥಾಪಿಸುವುದು, ಸಂಘ ಪರಿವಾರವನ್ನು ಮೀರಿಸಿದಂತೆ ದಸರಾ ಜಾತ್ರೆ ನಡೆಸುವುದು, ಕಲ್ಲಡ್ಕ ಪ್ರಭಾಕರ ಭಟ್ಟರನ್ನು, ವೀರೇಂದ್ರ ಹೆಗಡೆ ಅವರನ್ನು ಕರೆಸಿ ಶಹಬ್ಬಾಸ್ ಗಿರಿ ಪಡೆಯುವುದು ಈ ಮೂಲಕ ಸಂಘ ಪರಿವಾರವನ್ನು ಎದುರಿಸಿ ಚುನಾವಣೆಯನ್ನು ಗೆಲ್ಲಬಹುದು ಎಂಬುದು ನಿಮ್ಮ ಲೆಕ್ಕಾಚಾರವಾಗಿತ್ತು.

ಇಂತಹ ಮೂರ್ಖತನದ ಮೂಲಕ ನೀವು ಬೆಳೆಸಿದ್ದು ಜಾತ್ಯತೀತತೆಯನ್ನಲ್ಲ, ಕೋಮುವಾದವನ್ನು, ನೆರವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ, ಬಿಜೆಪಿಗೆ. ನೆನೆಪಿಡಿ, 1991ರಲ್ಲಿ ಕುದ್ರೋಳಿಯ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿ ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿದ ದಿನದಿಂದ ಇಲ್ಲಿಯ ವರೆಗೆ ಒಂದೇ ಒಂದು ಚುನಾವಣೆಯನ್ನು ನೀವು ಗೆಲ್ಲಲಿಲ್ಲ, ಐದು ಚುನಾವಣೆಗಳಲ್ಲಿ ಸೋತುಹೋದಿರಿ. (ವರ-ಶಾಪಗಳಲ್ಲಿ ನನಗೆ ನಂಬಿಕೆ ಇಲ್ಲ. ನಂಬುತ್ತಿದ್ದರೆ ನಿಮ್ಮ ರಾಜಕೀಯ ಅವನತಿಗೆ ನಾರಾಯಣ ಗುರುಗಳ ಚಿಂತನೆಗೆ ನೀವು ಮಾಡಿದ ಅಪಚಾರದ ಶಾಪವೂ ಕಾರಣವೆಂದು ಹೇಳುತ್ತಿದ್ದೆ.) .

ಆದರೆ ಯಾಕೆ ಸೋತುಹೋದೆ ಎನ್ನುವುದು ನಿಮಗಿನ್ನೂ ಅರ್ಥವಾಗಿಲ್ಲ. ನೀವು ದೇವಸ್ಥಾನ ಕಟ್ಟಿ, ಅಲ್ಲಿ ಮೂಲೆಮೂಲೆಗೂ ದೇವರ ಪ್ರತಿಮೆಗಳನ್ನು ಸ್ಥಾಪಿಸಿ, ಇಡೀ ಮಂಗಳೂರು ನಡುಗಿಹೋಗುವಂತೆ ದಸರಾ ಜಾತ್ರೆ ನಡೆಸಿ ನಿಮ್ಮದೇ ಸಮುದಾಯದ ಯುವಕರಲ್ಲಿ ಧಾರ್ಮಿಕ ಉನ್ಮಾದವನ್ನು ಸೃಷ್ಟಿಮಾಡಿಬಿಟ್ಟಿರಿ. ಆದರೆ ಆ ಧಾರ್ಮಿಕ ಉನ್ಮಾದದ ಅಭಿವ್ಯಕ್ತಿಗೆ ನೀವು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಇಲ್ಲ. ಅದು ಜಾತ್ಯತೀತತೆಯನ್ನು ಸಾರುವ ಪಕ್ಷ. ಮತ್ತೆ ಅವರೆಲ್ಲಿಗೆ ಹೋಗಬೇಕು? ಎಲ್ಲಿಗೆ ಹೋಗಬೇಕೋ ಅವರಲ್ಲಿಯೇ ಹೋಗಿದ್ದಾರೆ. ಹಣೆಗೆ ಕುಂಕುಮ ಬಳಿದುಕೊಂಡು ಕೇಸರಿ ಪಟ್ಟಿ ಬಿಗಿದುಕೊಂಡು ಬೀದಿಗಳಲ್ಲಿ ಪರಸ್ಪರ ಹೊಡೆದಾಡಿ ಸಾಯುತ್ತಿದ್ದಾರೆ. ಅವರ ಕೈಗೆ ಧರ್ಮದ ಕತ್ತಿ ಕೊಟ್ಟು ಹೊಡೆದಾಡುವಂತೆ ಮಾಡಿದವರು ತಮ್ಮ ಮಕ್ಕಳನ್ನು ಡಾಕ್ಟರ್ ಎಂಜನಿಯರ್ ಮಾಡಿ ರಾಜಕೀಯದ ಅಧಿಕಾರದ ನೆರಳಲ್ಲಿ ತಮ್ಮ ವ್ಯಾಪಾರಿ ಸಾಮ್ರಾಜ್ಯವನ್ನು ಇನ್ನಷ್ಟು ಬೆಳೆಸಿಕೊಂಡು ಆರಾಮವಾಗಿದ್ದಾರೆ.ಅವರಿಗೆ ಬುದ್ದಿ ಹೇಳಬೇಕಾದ ನೀವು ಅಕ್ಕಿಯಲ್ಲಿ ಕಲ್ಲು ಹುಡುಕುತ್ತಾ ಕೂತಿದ್ದೀರಿ.

ಜನಾರ್ಧನ ಪೂಜಾರಿಯವರೇ, ಈಗ ಹೇಳಿ ಮೊನ್ನೆ ಕೆಂಜೂರಿನಲ್ಲಿ ನಡೆದ ಪ್ರವೀಣ ಪೂಜಾರಿಯ ಹತ್ಯೆಗೆ, ಅದಕ್ಕಿಂತ ಮೊದಲು ಮೂಡಬಿದರೆ ಮತ್ತು ಬಂಟ್ವಾಳದಲ್ಲಿ ನಡೆದ ಹತ್ಯೆಗೆ ಯಾರು ಕಾರಣ ? ಹೌದು, ಕೊಲೆಗೈದವರು ಜೈಲಲ್ಲಿದ್ದಾರೆ. ಆದರೆ ಅಂತಹ ಪರಿಸ್ಥಿತಿಗೆ ಅಮಾಯಕ ಯುವಕರು ಬಲಿಯಾಗುವಂತೆ ಮಾಡಿದವರು ಯಾರು? ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆ ಎಂದಾದರೆ ಅದು ನಿಮ್ಮನ್ನೇ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಬಹುದು. ಈ ಆರೋಪದಿಂದ ನೀವು ಮುಕ್ತಿ ಬಯಸುವುದೇ ಆಗಿದ್ದರೆ ದಯವಿಟ್ಟು ನಾರಾಯಣ ಗುರುಗಳ ಚಿಂತನೆಯನ್ನು ಓದಿ ಅದನ್ನು ಕಾರ್ಯಗತಗೊಳಿಸಲು ನಿಮ್ಮ ನಿವೃತ್ತ ಜೀವನವನ್ನು ಬಳಸಿಕೊಳ್ಳಿ. ಅದುನಿಮಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು.